ಇಡೀ ವಿಶ್ವವನ್ನು ಕಾಡುತ್ತಿರುವ ಕೊರೊನಾ ಮಹಾಮಾರಿ ಜನತೆಯನ್ನು ಪ್ರತಿದಿನ ಆತಂಕದಲ್ಲೇ ಬದುಕುವಂತೆ ಮಾಡಿದೆ. ಈ ಆತಂಕದ ನಡುವೆಯೂ ಪುತ್ತೂರಿನ ಶ್ರೀ ಮೂಕಾಂಬಿಕ ಕಲ್ಚರಲ್ ಅಕಾಡೆಮಿ ವತಿಯಿಂದ ಎಲ್ಲರನ್ನು ಪೋಷಿಸಿ ಬೆಳೆಸಿ, ಸಲಹಿದ ಮಾತೃಭೂಮಿ ಭಾರತಾಂಬೆಗೆ ‘ನಮೋ ಜಗತಾಂ ಧಾತ್ರಿ’ ಎಂಬ ನೃತ್ಯ ಕಾರ್ಯಕ್ರಮದ ಮೂಲಕ ಸ್ತುತ್ಯಾರ್ಹ ಕಾರ್ಯ ಮಾಡಿದೆ.
ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ನೃತ್ಯ ವಲಯದಲ್ಲಿ ಹೆಸರು ಮಾಡಿದ ಸಂಸ್ಥೆಯಾಗಿದ್ದು, ಇಲ್ಲಿ ಕಲಿತ ಅನೇಕ ಕಲಾವಿದರು ಹೊಸ ಆಯಾಮಗಳನ್ನು ಸೃಜಿಸಲು ಅನುವು ಮಾಡಿಕೊಡಲಾಗಿದೆ. ಈಗ ಸಂಸ್ಥೆಯು 50 ಕಲಾವಿದರ ಸಹಕಾರದೊಂದಿಗೆ ಈ ವಿಡಿಯೋ ಮಾಡಿದ್ದು, ಕಲಾ ಪ್ರೇಮಿಗಳ ಮೆಚ್ಚುಗೆಗೆ ಕಾರಣವಾಗಿದೆ. ಅಂದ ಹಾಗೇ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ನಿರ್ದೇಶಕ ವಿದ್ವಾನ್ ಬಿ.ದೀಪಕ್ ಕುಮಾರ್ ಪುತ್ತೂರು ಮಾರ್ಗದರ್ಶನದಲ್ಲಿ ಎಲ್ಲ ಮಕ್ಕಳು ಅವರೇ ನೃತ್ಯ ಸಂಯೋಜನೆ ಮಾಡಿಕೊಂಡು ವಿಡಿಯೋ ಮಾಡಿದ್ದಾರೆ.
ಆಚಾರ್ಯ ನೋಚೂರು ವೆಂಕಟ್ರಾಮನ್ ಅದ್ಬುತ ಗೀತೆಯನ್ನು ರಚಿಸಿದ್ದು, ಇದಕ್ಕೆ ಪ್ರತಿಭಾವಂತ ಗಾಯಕ ಕುಲದೀಪ್ ಪೈ ಮತ್ತು ಅವರ ಶಿಷ್ಯೆ ಕು. ಸೂರ್ಯಗಾಯತ್ರಿ ಧ್ವನಿ ನೀಡಿದ್ದಾರೆ. ಕುಲದೀಪ್ ಪೈ ಈ ಹಾಡನ್ನು ಹಿಂದೆ ತಮ್ಮ ಆಲ್ಬಂ ಒಂದರಲ್ಲಿ ಬಳಸಿಕೊಂಡಿದ್ದರು. ಇದರ ಹಿನ್ನೆಲೆ ಸಂಗೀತವನ್ನು ಕುಲದೀಪ್ ಪೈ ಯವರ ಆಲ್ಬಂ ಸರಣಿ ‘ವಂದೇ ಗುರು ಪರಂಪರಾ’ ದಿಂದ ಆಯ್ದುಕೊಳ್ಳಲಾಗಿದೆ. ಹಿಸ್ನಾ ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ಯುವ ನಿರ್ದೇಶಕ ಅಕ್ಷಯ್ ನಾಯಕ್ ಕರೋಪಾಡಿ ಸುಂದರವಾಗಿ ಸಂಕಲನಗೊಳಿಸಿರುವ ಈ ವಿಡಿಯೋ ನಿಮ್ಮ ಮನವನ್ನೂ ಸೂರೆಗೊಳ್ಳುವುದು ಖಂಡಿತ.