ಕೊರೊನಾನ ನಿಯಂತ್ರಣಕ್ಕಾಗಿ ಲಾಕ್ ಡೌನ್ ಜಾರಿಗೊಳಿಸಿದ್ದ ಕಾರಣ ತಮ್ಮ ಬೆಳೆಗಳನ್ನು ಸಕಾಲಕ್ಕೆ ಮಾರಲಾಗದೆ ತೀವ್ರ ಆರ್ಥಿಕ ಸಂಕಷ್ಟ ಎದುರಿಸಿದ್ದ ರೈತರು ಈಗ ಲಾಕ್ ಡೌನ್ ನಿಯಮಾವಳಿಗಳು ಸಡಿಲಿಕೆಯಾಗಿರುವ ಕಾರಣ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಆದರೆ ಇದೀಗ ಬಹು ಭಕ್ಷಕ ಮಿಡತೆ ರಾಜ್ಯ ಪ್ರವೇಶಿಸುವ ಸಾಧ್ಯತೆ ಇರುವುದರಿಂದ ಮತ್ತೊಂದು ಆತಂಕ ಎದುರಾಗಿದೆ.
ಲಕ್ಷಾಂತರ ಸಂಖ್ಯೆಯಲ್ಲಿರುವ ಬಹು ಭಕ್ಷಕ ಮಿಡತೆಗಳು ರಾಜಸ್ಥಾನ, ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶದ ಮೂಲಕ ಮಹಾರಾಷ್ಟ್ರದ ನಾಗಪುರ ಪ್ರವೇಶಿಸಿದೆ ಎನ್ನಲಾಗಿದ್ದು, ಒಂದು ದಿನದಲ್ಲಿ 150 ಕಿಲೋ ಮೀಟರ್ ಕ್ರಮಿಸುವ ಸಾಮರ್ಥ್ಯ ಹೊಂದಿರುವ ಇವುಗಳು, ಇನ್ನೆರಡು ದಿನಗಳಲ್ಲಿ ಕರ್ನಾಟಕವನ್ನು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಲಕ್ಷಾಂತರ ಸಂಖ್ಯೆಯಲ್ಲಿರುವ ಈ ಮಿಡತೆಗಳ ಸೈನ್ಯ ಒಂದು ದಿನದಲ್ಲಿ ಸುಮಾರು 35 ಸಾವಿರ ಮಂದಿ ತಿನ್ನುವಷ್ಟು ಆಹಾರ ಧಾನ್ಯವನ್ನು ತಿಂದು ಮುಗಿಸುತ್ತವೆ ಎಂದು ಹೇಳಲಾಗಿದ್ದು, ಹೀಗಾಗಿ ಮಹಾರಾಷ್ಟ್ರದ ಗಡಿಯಲ್ಲಿರುವ ಜಿಲ್ಲೆಗಳ ಜಿಲ್ಲಾಡಳಿತಗಳಿಗೆ ಮಿಡತೆಗಳ ನಿಯಂತ್ರಣಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.