ಶಿವಮೊಗ್ಗ: ಮುಖ್ಯಮಂತ್ರಿಗಳ ವಿರುದ್ದ ಹಗುರವಾಗಿ ಮಾತನಾಡಿದ ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರ ವಿರುದ್ದ ಪಕ್ಷ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಶಾಸಕ ಆಯನೂರು ಮಂಜುನಾಥ್ ಆಗ್ರಹಿಸಿದ್ದಾರೆ.
ಅವರು ಇಂದು ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ತಮ್ಮ 78 ರ ಹರೆಯದಲ್ಲೂ ಮಹಾಮಾರಿ ಕೊರೋನಾ ನಿಯಂತ್ರಣಕ್ಕೆ ಯುವಕರನ್ನು ನಾಚಿಸುವಂತೆ ಓಡಾಡಿ ಬಡವರ, ಕಾರ್ಮಿಕರ, ದೀನದಲಿತರ ಮತ್ತು ಕೊರೋನಾ ಬಾಧಿತರ ಬಗ್ಗೆ ಚಿಂತನೆ ಮಾಡುತ್ತಾ, ರಾಜ್ಯದ ಜನರಲ್ಲಿ ಭರವಸೆ ಮೂಡಿಸುತ್ತಿರುವ ಇಂತಹ ಸಂದರ್ಭದಲ್ಲಿ ಪ್ರಚಾರದ ಗೀಳಿಗಾಗಿ ಮಾಧ್ಯಮಗಳ ಮುಂದೆ ಬಾಯಿಗೆ ಬಂದಂತೆ ಬಡಾಯಿ ಕೊಚ್ಚಿಕೊಳ್ಳುತ್ತಿರುವ ನನ್ನ ಮಿತ್ರ ಬಸವನಗೌಡ ಪಾಟೀಲ್ ಯತ್ನಾಳ್ ಅವರ ಹದ್ದುಮೀರಿದ್ದ ಕಿಡಗೇಡಿತನದ ಹೇಳಿಕೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದರು.
ಶಾಸಕನಾಗಿ ಹೇಳಿಕೆ ನೀಡುವ ಸ್ವಾತಂತ್ರ್ಯ ಅವರಿಗೆ ಇದ್ದರೂ ಸಹ ಅದಕ್ಕೆ ಇತಿಮಿತಿ ಇದ್ದು, ಪಕ್ಷದ ವರ್ಚಸ್ಸಿಗೆ ಅದರಿಂದ ಹಾನಿಯಾಗಬಾರದು. ಪಕ್ಷದ ಚೌಕಟ್ಟು ಮೀರಿದ ಯಾರೇ ಆದರೂ ಪಕ್ಷದ ಶಿಸ್ತುಕ್ರಮಕ್ಕೆ ಬದ್ದವಾಗಿರಬೇಕು. ಯತ್ನಾಳ್ ಅವರಿಗಿಂತ ಪಕ್ಷದಲ್ಲಿ ಹಿರಿಯನಾಗಿ ಒಂದು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ ನಾನಿದ್ದೇನೆ. ಇನ್ನು ಅನೇಕ ಹಿರಿಯ ನಾಯಕರಿದ್ದಾರೆ. ಅವರ್ಯಾರು ಅಧಿಕಾರ ದಾಹಕ್ಕಾಗಿ ಸಭ್ಯತೆ ಮೀರಿಲ್ಲ. ನಾನೇ ಪಕ್ಷದಲ್ಲಿ 5ನೇ ಹಿರಿಯ ಎಂಬ ಭ್ರಮೆಯಿಂದ ಹೊರಗೆ ಬನ್ನಿ, ವಿವಾದಾತ್ಮಕ ಹೇಳಿಕೆ ನೀಡಿ ಋಣಾತ್ಮಕ ಪ್ರಚಾರಕ್ಕೆ ಹಾತೊರೆಯಬೇಡಿ, ಬಿಎಸ್ವೈ ಸರ್ವಮಾನ್ಯ ನಾಯಕರು. ಯತ್ನಾಳ್ ರಂತಹವರಿಂದ ಬಿಎಸ್ವೈ ಬೆಳೆದಿಲ್ಲ ಎಂದು ಕುಟುಕಿದರು.
ಉಮೇಶ್ ಕತ್ತಿಯವರು ಕೂಡ 8 ಬಾರಿ ಶಾಸಕರಾಗಿದ್ಧು, ಅವರಿಗೆ ಎಲ್ಲ ಅರ್ಹತೆ ಇದೆ. ಆದರೆ ಅವರ ಬಾಯಿಂದಲೂ ಬಿಎಸ್ವೈ ನಮ್ಮ ನಾಯಕರಲ್ಲ ಎಂಬ ಹೇಳಿಕೆ ಬಂದಿಲ್ಲ. ಊಟದಲ್ಲಿ ಭಾಗವಹಿಸಿ ಹೊರಗೆ ಬಂದ ಮೇಲೆ ಮಾಧ್ಯಮದವರನ್ನು ಕಂಡು ಪ್ರಚಾರಕ್ಕಾಗಿ ಯತ್ನಾಳ್ ಅಂತಹವರು ನೀಡುವ ಹೇಳಿಕೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ ಎಂದರು. ಯತ್ನಾಳ್ ಹೇಳಿಕೆಯನ್ನು ಕಂಡು ಸಂಭ್ರಮಿಸುತ್ತಿರುವ ಕಾಂಗ್ರೆಸ್ಸಿಗರಿಗೆ ಬಿಜೆಪಿ ಬಗ್ಗೆ ಮತ್ತು ಯಡಿಯೂರಪ್ಪನವರ ಬಗ್ಗೆ ಟೀಕೆ ಮಾಡುವ ನೈತಿಕತೆ ಇಲ್ಲ ಎಂದರು.