ಧಾರ್ಮಿಕ ಕ್ಷೇತ್ರವಾಗಿ ಹಾಗೂ ಪ್ರವಾಸಿ ತಾಣವಾಗಿ ಕುದ್ರೋಳಿ ಗೋಕರ್ಣನಾಥೇಶ್ವರನ ದೇವಾಲಯ ಪ್ರಸಿದ್ಧಿ ಪಡೆದಿದೆ. ಮಂಗಳೂರಿನ ಕುದ್ರೋಳಿ ಎಂಬ ಪ್ರದೇಶದಲ್ಲಿ ಶಿವನಿಗೆ ಮುಡಿಪಾದ ಈ ದೇವಾಲಯವಿದೆ. ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಂತೆಯೇ ವಿಜೃಂಭಣೆಯಿಂದ ದಸರಾ ನಡೆಯುವ ಮತ್ತೊಂದು ಕ್ಷೇತ್ರವೆಂದರೆ ಅದು ಕುದ್ರೋಳಿ.
ಇಲ್ಲಿರುವ ಗೋಕರ್ಣನಾಥೇಶ್ವರನ ಭವ್ಯ ಹಾಗೂ ಸುಂದರ ದೇವಾಲಯವು ಕ್ರಾಂತಿಪುರುಷ ಎಂದು ಕರೆಯಲಾಗುವ ನಾರಾಯಣ ಗುರುಗಳ ಸಮ್ಮುಖದಲ್ಲಿ ಅವರ ಕಲ್ಪನೆಯಂತೆಯೇ ಸ್ಥಾಪನೆಗೊಂಡಿದೆ.
ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳಿಂದ ಭೇಟಿ ನೀಡಲ್ಪಡುತ್ತದೆ. ಶತಮಾನಗಳಷ್ಟು ಹಳೆಯದಾದ ಈ ದೇವಾಲಯ ನಿರ್ಮಾಣಕ್ಕೆ ಸಾಕಷ್ಟು ಗಣ್ಯ ಹಾಗೂ ಸಮಾಜಮುಖಿ ವ್ಯಕ್ತಿಗಳ ಪರಿಶ್ರಮವಿದೆ. ದ್ರಾವಿಡ ಶೈಲಿಯ ಈ ದೇವಾಲಯದ ಮುಂಭಾಗದಲ್ಲಿ ಭವ್ಯವಾದ ರಾಜ ಗೋಪುರವಿದೆ. ಎತ್ತರವಾದ ಆನೆಯ ಪ್ರತಿಮೆಗಳು ಭಕ್ತರನ್ನು ಸ್ವಾಗತಿಸುತ್ತವೆ.
ನವರಾತ್ರಿಯ ಸಮಯದಲ್ಲಿ ನವದುರ್ಗೆಯರನ್ನು ಕೂರಿಸಿ ಮಾಡುವ ಭವ್ಯ ಮೆರವಣಿಗೆ, ವಿಶೇಷ ಪೂಜೆಗಳು ಜನಾಕರ್ಷಣೆಯ ಮುಖ್ಯ ಚಟುವಟಿಕೆಗಳಾಗಿವೆ. ಮೈಸೂರಿನ ದಸರಾದಂತೆ, ಮಂಗಳೂರು ದಸರಾ ಕೂಡಾ ಖ್ಯಾತಿ ಪಡೆದಿದೆ.