ಕಳೆದ ಒಂದು ತಿಂಗಳಿಗೂ ಅಧಿಕ ಕಾಲದಿಂದ ಸ್ಥಗಿತಗೊಂಡಿದ್ದ ಸಾಗರ ತಾಲೂಕು ನರಸೀಪುರದ ನಾಟಿ ಔಷಧ ವಿತರಣೆಗೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಬುಧವಾರದಂದು ನರಸೀಪುರಕ್ಕೆ ಭೇಟಿನೀಡಿ ನಾಟಿ ವೈದ್ಯ ನಾರಾಯಣ ಮೂರ್ತಿ ಅವರೊಂದಿಗೆ ಮಾತನಾಡಿದ ಈಶ್ವರಪ್ಪ, ಪಾರಂಪರಿಕ ಔಷಧಿಯಿಂದ ಅನೇಕ ಜನರಿಗೆ ಅನುಕೂಲವಾಗಿದೆ. ನಂಬಿಕೆ ಇದ್ದವರಿಗೆ ಔಷಧ ನೀಡಲು ಯಾವುದೇ ಅಭ್ಯಂತರವಿಲ್ಲ ಎಂದು ತಿಳಿಸಿದರು.
ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮೇಘಾಲಯದ ಸಚಿವರೊಬ್ಬರು ತಮಗೆ ಇಲ್ಲಿನ ಔಷಧಿ ಕಳುಹಿಸುವಂತೆ ನನ್ನ ಬಳಿ ಕೋರಿದ್ದರು. ಬಳಿಕ ಅವರಿಗೆ ಆಪ್ತರ ಮೂಲಕ ನಾಟಿ ಔಷಧ ಕಳುಹಿಸಿಕೊಡಲಾಗಿದ್ದು, ಈಗ ಅವರಿಗೆ ಕಾಯಿಲೆ ವಾಸಿಯಾಗಿರುವುದಾಗಿ ತಿಳಿಸಿದ್ದಾರೆ ಎಂದು ಈಶ್ವರಪ್ಪ ಹೇಳಿದರು.