ಕಳೆದ ಎರಡು ತಿಂಗಳಿಗೂ ಅಧಿಕ ಕಾಲದಿಂದ ಲಾಕ್ಡೌನ್ ಜಾರಿಯಲ್ಲಿರುವುದರಿಂದ ರಾಜ್ಯದ ಎಲ್ಲ ಧಾರ್ಮಿಕ ಮಂದಿರಗಳು ಬಂದ್ ಆಗಿವೆ. ಈಗ ಜಾರಿಯಲ್ಲಿರುವ ಲಾಕ್ಡೌನ್ ಮೇ 31ರಂದು ಅಂತ್ಯಗೊಳ್ಳಲಿದ್ದು, ಜೂನ್ 1 ರಿಂದ ದೇವಾಲಯಗಳ ಆರಂಭಕ್ಕೆ ಅನುಮತಿ ಸಿಗುವ ನಿರೀಕ್ಷೆಯಿದೆ.
ಹೀಗಾಗಿ ಧರ್ಮಸ್ಥಳ ಸೇರಿದಂತೆ ರಾಜ್ಯದಲ್ಲಿರುವ ವಿವಿಧ ದೇವಾಲಯಗಳು ಜೂನ್1ರಿಂದಲೇ ಭಕ್ತರ ದರ್ಶನಕ್ಕಾಗಿ ತೆರೆಯಲಿವೆ ಎನ್ನಲಾಗಿದ್ದು, ಇದಕ್ಕಾಗಿ ಈಗಾಗಲೇ ಸಕಲ ಸಿದ್ಧತೆಗಳು ನಡೆಯುತ್ತಿವೆ. ಆದರೆ ಉಡುಪಿ ಶ್ರೀಕೃಷ್ಣ ದರ್ಶನ ಭಕ್ತರಿಗೆ ಸಿಗುವುದು ತಡವಾಗಲಿದೆ ಎನ್ನಲಾಗಿದೆ.
ಪರ್ಯಾಯ ಆದಮಾರು ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಈ ವಿಷಯವನ್ನು ತಿಳಿಸಿದ್ದು, ಜೂನ್ 15ರ ಬಳಿಕವೇ ಶ್ರೀಕೃಷ್ಣನ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ. ಆದರೆ ರಥಬೀದಿಯ ಕನಕ ಗೋಪುರದ ಬಳಿಯಿರುವ ಕನಕನ ಕಿಂಡಿಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ಶ್ರೀಕೃಷ್ಣನ ದರ್ಶನ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.