ಚೀನಾದ ವುಹಾನ್ ನಗರದಲ್ಲಿ ಮೊದಲಿಗೆ ಕಾಣಿಸಿಕೊಂಡ ಕೊರೊನಾ ಮಹಾಮಾರಿ ಈಗ ಭಾರತದಲ್ಲೂ ಆರ್ಭಟಿಸುತ್ತಿದ್ದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮೊದಲ ಕೊರೊನಾ ಸೋಂಕು ಪ್ರಕರಣ ವರದಿಯಾಗಿತ್ತು. ದೇಶದಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟ ಮೊದಲ ಪ್ರಕರಣ ಕಲಬುರಗಿಯಲ್ಲಿ ನಡೆದಿದ್ದು, ಇದರಿಂದಾಗಿ ಸಹಜವಾಗಿಯೇ ಆತಂಕ ಎದುರಾಗಿತ್ತು.
ಮಾರ್ಚ್ 9ರಂದು ಬೆಂಗಳೂರಿನಲ್ಲಿ ಮೊದಲ ಕೊರೊನಾ ಸೋಂಕು ಪ್ರಕರಣ ಕಾಣಿಸಿಕೊಂಡರೂ ಆ ಬಳಿಕ ರಾಜ್ಯದ ಬಹುತೇಕ ಜಿಲ್ಲೆಗಳು ಕೊರೊನಾ ಸೋಂಕು ಮುಕ್ತವಾಗಿದ್ದವು. ಬಹುದಿನಗಳ ಕಾಲ ಶಿವಮೊಗ್ಗ, ಚಾಮರಾಜನಗರ, ಹಾಸನ, ಚಿಕ್ಕಮಗಳೂರು ಮೊದಲಾದ ಜಿಲ್ಲೆಗಳಲ್ಲಿ ಒಂದೇ ಒಂದು ಕೊರೊನಾ ಸೋಂಕು ಪ್ರಕರಣಗಳು ಕಾಣಿಸಿಕೊಂಡಿರಲಿಲ್ಲ.
ಯಾವಾಗ ಲಾಕ್ ಡೌನ್ ಸಡಿಲಿಕೆ ಮಾಡಿ ಅಂತರ ಜಿಲ್ಲೆ, ಅಂತರ್ ರಾಜ್ಯಗಳಿಂದ ಜನ ರಾಜ್ಯಕ್ಕೆ ಬರಲು ಅವಕಾಶ ನೀಡಲಾಯಿತೋ ಆ ಬಳಿಕ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿವೆ. ಚಾಮರಾಜನಗರದಲ್ಲಿ ಈವರೆಗೂ ಒಂದೇ ಒಂದು ಕೊರೊನಾ ಸೋಂಕು ಪ್ರಕರಣ ವರದಿಯಾಗಿಲ್ಲವಾಗಿದ್ದು, ಇದರಿಂದಾಗಿ ರಾಜ್ಯದ ಏಕೈಕ ‘ಕೊರೊನಾ ಮುಕ್ತ ಜಿಲ್ಲೆ’ ಎಂಬ ಹೆಗ್ಗಳಿಕೆಯನ್ನು ಚಾಮರಾಜನಗರ ಹೊಂದಿದೆ.