ನವದೆಹಲಿ: ಲಾಕ್ ಡೌನ್ ಜಾರಿಯಾದ ಕಾರಣ ಎರಡು ತಿಂಗಳಿಗೂ ಹೆಚ್ಚು ಅವಧಿಯಿಂದ ಸ್ಥಗಿತಗೊಂಡಿರುವ ಶಾಲೆಗಳನ್ನು ಪುನಾರಂಭಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಶೇಕಡ 30 ರಷ್ಟು ಹಾಜರಾತಿಯೊಂದಿಗೆ ಎಂಟನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಶಾಲೆ ಆರಂಭಿಸಲು ಯೋಜಿಸಲಾಗಿದೆ. ಕಿರಿಯ ವಿದ್ಯಾರ್ಥಿಗಳಿಗೆ ಮನೆಯಲ್ಲೇ ಉಳಿಸಿಕೊಂಡು ಹಸಿರು ಮತ್ತು ಕಿತ್ತಳೆ ವಲಯದಲ್ಲಿ ಶಾಲೆ ಆರಂಭಿಸುವ ಚಿಂತನೆ ಇದೆ.
ಒಂದರಿಂದ ಏಳನೇ ತರಗತಿಗಳ ಮಕ್ಕಳಿಗೆ ಸದ್ಯಕ್ಕೆ ಶಾಲೆ ನಡೆಸುವುದಿಲ್ಲ. ಶೇಕಡ 30 ರಷ್ಟು ಹಾಜರಾತಿಯೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ನಿಯಮಾನುಸಾರ ಎಂಟನೇ ತರಗತಿ ಮೇಲ್ಪಟ್ಟ ಶಾಲೆಗಳನ್ನು ನಡೆಸಲು ಚಿಂತನೆ ನಡೆಸಲಾಗುವುದು.
ಸುರಕ್ಷತೆಯ ಕಾರಣಕ್ಕೆ ಒಂದರಿಂದ ಏಳನೇ ತರಗತಿಯ ಮಕ್ಕಳಿಗೆ ಶಾಲೆ ಆರಂಭಿಸುವುದಿಲ್ಲ. ಈ ವಾರದ ಕೊನೆಯಲ್ಲಿ ಶಾಲೆಗಳನ್ನು ಪುನಃ ತೆರೆಯುವ ಅಧಿಕೃತ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಸಂಬಂಧಿತ ಸಚಿವಾಲಯಗಳ ನಡುವೆ ಈ ಕುರಿತು ಚರ್ಚೆಗಳು ಆರಂಭವಾಗಿದ್ದು, ಮಾರ್ಚ್ 16 ರಿಂದ ಮುಚ್ಚಲ್ಪಟ್ಟಿರುವ ಶಾಲೆಗಳನ್ನು ಆರಂಭಿಸಲು ಚಿಂತನೆ ನಡೆಸಲಾಗಿದೆ. ಶಾಲೆಗಳಲ್ಲಿ ನಿಗದಿತ ಮಾರ್ಗಸೂಚಿ ಅನುಸರಿಸಲು ಮತ್ತು ಈ ನಿಟ್ಟಿನಲ್ಲಿ ಶಿಕ್ಷಕರಿಗೆ ಅಗತ್ಯವಾದ ಸಲಹೆ ಸೂಚನೆ ನೀಡಿ ಶಾಲೆ ಆರಂಭಿಸಲಾಗುವುದು.
ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಖಾತೆ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ಈ ಹಿಂದೆಯೇ ಸುರಕ್ಷಿತ ಮಾರ್ಗಸೂಚಿಗಳನ್ನು ರೂಪಿಸಿದ ನಂತರ ಶಾಲೆ-ಕಾಲೇಜುಗಳನ್ನು ಆರಂಭಿಸಲಾಗುವುದು ಎಂದು ಹೇಳಿದ್ದರು.
ಅಂತೆಯೇ ಒಂದರಿಂದ ಏಳನೇ ತರಗತಿ ಹೊರತುಪಡಿಸಿ ಎಂಟನೇ ತರಗತಿ ಮೇಲ್ಪಟ್ಟ ಶಾಲೆಗಳನ್ನು ಶೇಕಡ 30ರಷ್ಟು ಹಾಜರಾತಿಯೊಂದಿಗೆ ಮಾರ್ಗಸೂಚಿಯನ್ವಯ ನಡೆಸುವ ಬಗ್ಗೆ ಚರ್ಚೆ ನಡೆಸಲಾಗಿದೆ. ಜುಲೈನಿಂದ ಹಸಿರು ಮತ್ತು ಕಿತ್ತಳೆ ವಲಯದಲ್ಲಿ ಶಾಲಾ-ಕಾಲೇಜುಗಳನ್ನು ಆರಂಭಿಸಲಾಗುವುದು.
8ನೇ ತರಗತಿ ಮೇಲ್ಪಟ್ಟ ಶಾಲೆಗಳಿಗೆ ಶೇಕಡ 100 ರಷ್ಟು ವಿದ್ಯಾರ್ಥಿಗಳೊಂದಿಗೆ ಕಾರ್ಯನಿರ್ವಹಿಸಲು ಸಾಧ್ಯವಾದರೆ ಒಂದರಿಂದ ಏಳನೇ ತರಗತಿ ಮಕ್ಕಳಿಗೂ ಶಾಲೆಗಳನ್ನು ನಡೆಸಲು ಚಿಂತನೆ ಇದೆ ಎಂದು ಹೇಳಲಾಗಿದೆ.