ಕಾನ್ಪುರ: ಆತ ಚಾಲಕ, ಆಕೆ ಭಿಕ್ಷುಕಿ ಒಲವಿಗೆ ವೃತ್ತಿ ಅಡ್ಡಿ ಬಂದಿಲ್ಲ. ಲಾಕ್ಡೌನ್ ಕೂಡ…!! ಹೌದು, ಕಾನ್ಪುರದ ಚಾಲಕನೊಬ್ಬ ಲಾಕ್ಡೌನ್ ಅವಧಿಯಲ್ಲಿ ಭಿಕ್ಷುಕಿಯನ್ನು ಪ್ರೀತಿಸಿ ಮದುವೆಯಾಗಿದ್ದಾನೆ.
ಲಾಕ್ಡೌನ್ ಅವಧಿಯಲ್ಲಿ ಆತ ತನ್ನ ಯಜಮಾನನ ಸೂಚನೆಯಂತೆ ದಿನವೂ ನಿರ್ಗತಿಕರಿಗೆ ಊಟ ನೀಡಲು ಹೋಗುತ್ತಿದ್ದ. ಅಲ್ಲಿ ಫುಟ್ ಪಾತ್ ನಲ್ಲಿ ಭಿಕ್ಷೆ ಬೇಡುತ್ತಿದ್ದ ಯುವತಿಯ ಪರಿಚಯವಾಗಿತ್ತು.
ಅಷ್ಟೇ ಅಲ್ಲ, ಆಕೆಯ ಜತೆ ಸ್ನೇಹ ಬೆಳೆದಿತ್ತು. ಆಕೆಯ ಕಷ್ಟ ಕೇಳಿದ ಚಾಲಕ ಭಿಕ್ಷೆ ಬೇಡುವುದನ್ನು ಬಿಡಲು ಪ್ರೇರೇಪಿಸಿದ. ಇಬ್ಬರಲ್ಲೂ ಸಲುಗೆ ಬೆಳೆದಿತ್ತು.ಒಂದು ದಿನ ಆಕೆಗೆ ಪ್ರೇಮ ನಿವೇದನೆಯನ್ನೂ ಮಾಡಿದ್ದ. ಲಾಕ್ಡೌನ್ ಮುಗಿಯುವ ಹೊತ್ತಿಗೆ ಆಶ್ರಮವೊಂದರಲ್ಲಿ ಇಬ್ಬರ ಮದುವೆಯೂ ಮುಗಿದು ಹೋಗಿದೆ.
ಹಾಂ, ಆಕೆ ತಂದೆ ಮೃತಪಟ್ಟಿದ್ದರು. ತಾಯಿ ಪಾರ್ಶ್ವವಾಯು ರೋಗಕ್ಕೆ ತುತ್ತಾಗಿದ್ದರು. ಅಣ್ಣ ಅತ್ತಿಗೆ ಈಕೆಯನ್ನು ಮನೆಯಿಂದ ಹೊರಗಟ್ಟಿದ್ದರು. “ಊಟಕ್ಕೆ ದಾರಿ ಕಾಣದೇ ಭಿಕ್ಷೆ ಬೇಡಲು ಆರಂಭಿಸಿದೆ. ಲಾಕ್ಡೌನ್ ನರಕ ತೋರಿಸಿಬಿಟ್ಟಿತು” ಎಂದು ಆಕೆ ಮಾಧ್ಯಮ ಸಂದರ್ಶನವೊಂದರಲ್ಲಿ ಹೇಳಿದ್ದಾಳೆ.
ಮದುವೆಗಳು ದೇವಲೋಕದಲ್ಲೇ ನಿಗದಿಯಾಗುತ್ತವೆ ಎಂದು ಹೇಳುತ್ತಾರೆ. ಆದರೆ, ಇಲ್ಲಿ ಮದುವೆ ಫುಟ್ ಪಾತ್ ನಲ್ಲಿ ನಿಗದಿಯಾಗಿದೆ.