ಲಾಕ್ಡೌನ್ ಜಾರಿಯಾದ ನಂತರ ಅನೇಕರು ಹಸಿವಿನಿಂದ ಬಳಲಿದ್ದಾರೆ. ಹೀಗೆ ಹಸಿವಿನಿಂದ ಕಂಗಾಲಾದ ಐವರು ಮೇ 12 ರಂದು ರಾತ್ರಿ ಜುನಾಗಢದ ವೈಭವ ಚೌಕ್ ಸಮೀಪ ಇರುವ ಗಜಾನನ ಪರೋಟ ಹೌಸ್ ನಲ್ಲಿ ಕಳವು ಮಾಡಿದ್ದಾರೆ.
ಅಂದಹಾಗೆ, ಅವರು ಹೋಟೆಲ್ ಒಳಗೆ ನುಗ್ಗಿ ಅಡುಗೆ ಕೋಣೆಯಲ್ಲಿ ತಡಕಾಡಿ ಅಕ್ಕಿಯನ್ನು ತೊಳೆದು ಅನ್ನ ಮಾಡಿದ್ದಾರೆ. ಬಟಾಟೆ ಸಾಂಬಾರ್ ಮಾಡಿಕೊಂಡು ಹಸಿದ ಹೊಟ್ಟೆ ತುಂಬಿಸಿಕೊಂಡು ಪಾತ್ರೆಗಳನ್ನು ನೀಟಾಗಿ ತೊಳೆದಿಟ್ಟು ಅಲ್ಲಿಂದ ತೆರಳಿದ್ದಾರೆ. ಈ ವೇಳೆ ಅವರು ಹೋಟೆಲ್ ನಲ್ಲಿ ಬೇರೆ ಯಾವ ವಸ್ತುಗಳನ್ನು ಮುಟ್ಟಿಲ್ಲ. ಹಸಿವು ನೀಗಿಸಿಕೊಂಡು ಅಲ್ಲಿಂದ ಹೊರಟಿದ್ದಾರೆ.
ಮರುದಿನ ಬೆಳಗ್ಗೆ ಬಂದ ಹೋಟೆಲ್ ಮಾಲೀಕ ಬಾಗಿಲು ತೆರೆದು ಸಿಸಿ ಟಿವಿಯಲ್ಲಿ ರಾತ್ರಿ ನಡೆದ ಘಟನೆಯನ್ನು ಗಮನಿಸಿದ್ದಾನೆ. ಆದರೆ ಹಸಿವಿನಿಂದ ಕಂಗಾಲಾದ ಐವರು, ಯಾವುದೇ ವಸ್ತು ಮುಟ್ಟದೇ ಅಡುಗೆ ಮಾಡಿಕೊಂಡು ಉಂಡು ಹೋಗಿರುವುದನ್ನು ಗಮನಿಸಿದ ಆತ ಪೊಲೀಸರಿಗೆ ದೂರು ಕೊಡದೇ ಮಾನವೀಯತೆ ಮೆರೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ವೈರಲ್ ಆಗಿದ್ದು ಹೋಟೆಲ್ ಮಾಲೀಕನ ಮಾನವೀಯತೆ ಮತ್ತು ಹಸಿವು ನೀಗಿಸಿಕೊಂಡವರ ಪ್ರಾಮಾಣಿಕತೆ ಬಗ್ಗೆ ಭಾರಿ ಚರ್ಚೆಯಾಗಿದೆ.