ಭಾರತದ ಪೂರ್ವ ಕಡಲ ತೀರಕ್ಕೆ ಅಪ್ಪಳಿಸಿದ್ದ ನೀವಾರ್ ಚಂಡಮಾರುತದಿಂದ ಐವರು ಮೃತಪಟ್ಟಿದ್ದಲ್ಲದೇ ನೂರಾರು ಮರಗಳು ಬುಡಮೇಲಾಗಿದ್ದು, ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯವಾಗಿದೆ.
ಆದರೆ ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಉಡಪ್ಪಾ ಗ್ರಾಮದ ಜನರಿಗೆ ಈ ಚಂಡಮಾರುತ ಸುವರ್ಣ ’ಸುದ್ದಿ’ಯೊಂದನ್ನು ತಂದಿದೆ. ಚಂಡಮಾರುತದಿಂದಾಗಿ ಕಡಲ ತೀರಕ್ಕೆ ಚಿನ್ನದ ರಾಶಿ ಬಂದಿದೆ ಎಂಬ ವದಂತಿಗಳನ್ನು ಕೇಳಿದ ಇಲ್ಲಿನ ಜನರ ಚಿನ್ನದ ತಲಾಶೆಯಲ್ಲಿ ಬೀಚ್ ಬಳಿ ಬೀಡು ಬಿಟ್ಟಿದ್ದರು.
ಕಡಲ ತೀರದಲ್ಲಿ ಚಿನ್ನದ ಚೂರುಗಳನ್ನು ಕಂಡ ಮೀನುಗಾರರಿಂದ ಈ ಸುದ್ದಿ ಎಲ್ಲಾ ಕಡೆ ಹಬ್ಬಿದೆ. ಇದಾದ ಬೆನ್ನಿಗೇ ಆ ಜಾಗಕ್ಕೆ ನೂರಾರು ಮಂದಿ ಬಂದು ಸೇರಿಕೊಂಡು ತಮ್ಮ ಅದೃಷ್ಟ ಪರೀಕ್ಷೆ ಮಾಡಲು ಮುಂದಾಗಿದ್ದಾರೆ. ಈ ಶೋಧದಲ್ಲಿ ಸುಮಾರು 50 ಮಂದಿಗೆ ತಲಾ 3500 ಮೌಲ್ಯದಷ್ಟು ಚಿನ್ನ ಸಿಕ್ಕಿದೆ ಎಂದು ತಿಳಿದು ಬಂದಿದೆ.