ಕೊರೊನಾ ಸೋಂಕು ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಲಾಕ್ಡೌನ್ ಜಾರಿಗೊಳಿಸಿದ್ದರಿಂದ ಕೆಲಸವಿಲ್ಲದೆ ಕಂಗಾಲಾಗಿದ್ದ ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ತೆರಳಲು ಮುಂದಾಗಿದ್ದರು. ಆದರೆ ಬಸ್ ಹಾಗೂ ರೈಲು ಸಂಚಾರವಿಲ್ಲದ ಕಾರಣ ಕಾಲ್ನಡಿಗೆಯಲ್ಲಿ ಪ್ರಯಾಣ ಮುಂದುವರಿಸಿದ್ದರು.
ಈ ವೇಳೆ ಅನೇಕರು ದುರಂತ ಸಾವನ್ನಪ್ಪಿದ್ದು, ಆ ಬಳಿಕ ಅವರುಗಳ ಪ್ರಯಾಣಕ್ಕೆ ಬಸ್ ಹಾಗೂ ರೈಲು ಸಂಚಾರವನ್ನು ಮಾಡಲಾಗಿದೆ. ಆದರೆ ಇದು ಕೂಡಾ ಅವ್ಯವಸ್ಥೆಯಿಂದ ಕೂಡಿದ್ದು, ಇದರ ಮಧ್ಯೆ ವಲಸೆ ಕಾರ್ಮಿಕರ ಪ್ರಯಾಣ ಕುರಿತಂತೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ.
ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ಮುಂದಾದರೆ ಅದನ್ನು ರಾಜ್ಯಗಳು ತಡೆಯಬಾರದು. ಅಲ್ಲದೇ ಅವರುಗಳ ಪ್ರಯಾಣಕ್ಕೆ ಬಸ್, ರೈಲು ಸಂಚಾರ ವ್ಯವಸ್ಥೆ ಮಾಡಬೇಕು. ಇದರ ಸಂಪೂರ್ಣ ವೆಚ್ಚವನ್ನು ಆಯಾ ಸರ್ಕಾರಗಳು ಭರಿಸಬೇಕು ಎಂದು ತಿಳಿಸಲಾಗಿದೆ. ಜೊತೆಗೆ ಇವರುಗಳಿಗೆ ಊಟ – ಉಪಹಾರದ ಜೊತೆಗೆ ಸುರಕ್ಷತೆ ಕುರಿತು ಕ್ರಮ ಕೈಗೊಳ್ಳುವಂತೆಯೂ ಸುಪ್ರೀಂ ಕೋರ್ಟ್ ಸೂಚಿಸಿದೆ.