ಲಾಕ್ ಡೌನ್ ನಿಂದಾಗಿ ಕೆಲಸವಿಲ್ಲದೆ ಅತಂತ್ರರಾಗಿರುವ ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ತೆರಳಲು ಮುಂದಾಗಿದ್ದು, ಆದರೆ ಅವರುಗಳ ಸಂಕಷ್ಟ ಮಾತ್ರ ಬಗೆಹರಿಯುತ್ತಿಲ್ಲ. ವಲಸೆ ಕಾರ್ಮಿಕರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ಶ್ರಮಿಕ್ ರೈಲು ಸಂಚಾರ ಆರಂಭಿಸಿದ್ದು, ಆದರೆ ರೈಲ್ವೆ ಇಲಾಖೆಯ ಎಡವಟ್ಟಿನಿಂದ ವಲಸೆ ಕಾರ್ಮಿಕರು ಪರದಾಟ ನಡೆಸಿರುವ ಪ್ರಕರಣ ಈಗ ಬೆಳಕಿಗೆ ಬಂದಿದೆ.
ಗುಜರಾತಿನಲ್ಲಿದ್ದ ವಲಸೆ ಕಾರ್ಮಿಕರನ್ನು ಬಿಹಾರಕ್ಕೆ ಕರೆದುಕೊಂಡು ಹೊರಟಿದ್ದ ಶ್ರಮಿಕ್ ರೈಲು ಬಿಹಾರದ ಬದಲು ಬೆಂಗಳೂರು ತಲುಪಿತ್ತು ಎನ್ನಲಾಗಿದೆ. ಅದೇ ರೀತಿ ಸೂರತ್ನಿಂದ ಬಿಹಾರದ ಛಪ್ರಾ ನಿಲ್ದಾಣಕ್ಕೆ ಹೋಗಬೇಕಿದ್ದ ರೈಲು ಒಡಿಶಾದ ರೂರ್ಕೆಲಾಕ್ಕೆ ಹೋಗಿ ತಲುಪಿತ್ತು ಎನ್ನಲಾಗಿದೆ.
ರೈಲ್ವೆ ಇಲಾಖೆಯ ಈ ದೊಡ್ಡ ಯಡವಟ್ಟಿನಿಂದಾಗಿ ಊಟ – ಆಹಾರವಿಲ್ಲದೆ ಮೊದಲೇ ಕಂಗೆಟ್ಟಿದ್ದ ವಲಸೆ ಕಾರ್ಮಿಕರು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸೂರತ್ನಿಂದ ಮೇ 16ಕ್ಕೆ ಹೊರಟಿದ್ದ ಶ್ರಮಿಕ್ ರೈಲು ಬಿಹಾರದ ಛಪ್ರಾವನ್ನು ಮೇ 18ಕ್ಕೆ ತಲುಪಬೇಕಿತ್ತು. ಆದರೆ ಈ ರೈಲು ಮಾರ್ಗ ತಪ್ಪಿ ಬೆಂಗಳೂರಿಗೆ ಬಂದಿದ್ದು, ಮತ್ತೆ ವಾಪಸ್ ಹೊರಟು ಮೇ 25ರಂದು ಛಪ್ರಾ ನಿಲ್ದಾಣವನ್ನು ತಲುಪಿದೆ. ಅಂದರೆ ಒಂಬತ್ತು ದಿನಗಳ ಕಾಲ ವಲಸೆ ಕಾರ್ಮಿಕರು ರೈಲು ಪ್ರಯಾಣ ಮಾಡಿದಂತಾಗಿದ್ದು, ಈ ಸಂದರ್ಭದಲ್ಲಿ ಆಹಾರಕ್ಕೆ ಪರದಾಟ ನಡೆಸುವಂತಾಗಿತ್ತು ಎನ್ನಲಾಗಿದೆ.