ರಾಜ್ಯದಲ್ಲಿ ಪ್ರಥಮ ಹಾಗೂ ದೇಶದಲ್ಲಿ ಎರಡನೇ ಪ್ರಯತ್ನ ಎಂಬಂತೆ ನಿರ್ಮಾಣಗೊಂಡಿದ್ದ ಉಡುಪಿಯ ಮಲ್ಪೆ ಬೀಚ್ನ ತೇಲುವ ಸೇತುವೆಯು ಗಾಳಿಯ ರಭಸಕ್ಕೆ ಕೊಚ್ಚಿ ಹೋಗಿದೆ. ಈ ಮೂಲಕ ಬರೋಬ್ಬರಿ 80 ಲಕ್ಷ ರೂಪಾಯಿ ಮೌಲ್ಯದ ಕಾಮಗಾರಿ ಹಳ್ಳ ಹಿಡಿದಂತಾಗಿದೆ.
ಎರಡು ದಿನಗಳ ಹಿಂದೆ ಶಾಸಕ ಕೆ. ರಘುಪತಿ ಭಟ್ ಈ ತೇಲುವ ಸೇತುವೆಯನ್ನು ಲೋಕಾರ್ಪಣೆಗೊಳಿಸಿದ್ದರು. ಫೋಂಟೊನ್ಸ್ ಬ್ಲಾಕ್ಗಳಿಂದ ನಿರ್ಮಾಣಗೊಂಡಿದ್ದ ಈ ತೇಲುವ ಸೇತುವೆಯು ನಿಮಗೆ ಸಮುದ್ರದಲ್ಲಿ ತೇಲಿದ ಅನುಭವವನ್ನು ನೀಡುತ್ತಿತ್ತು. ಇದು ರಾಜ್ಯದಲ್ಲಿಯೇ ಮೊದಲ ಪ್ರಯತ್ನವಾದ್ದರಿಂದ ಕಳೆದ 2 ದಿನಗಳಿಂದ ತೇಲುವ ಸೇತುವೆಯನ್ನು ನೋಡಲು ಪ್ರವಾಸಿಗರ ದಂಡೇ ಇಲ್ಲಿಗೆ ಆಗಮಿಸುತ್ತಿತ್ತು.
100 ಮೀಟರ್ ಉದ್ದ ಹಾಗೂ 3.5 ಮೀಟರ್ ಅಗಲವನ್ನು ಹೊಂದಿರುವ ಈ ಸೇತುವೆಯನ್ನು ಹೆಚ್ಚಿನ ಸಾಂದ್ರತೆಯ ಫೋಂಟೊನ್ಸ್ ಬ್ಲಾಕ್ಗಳಿಂದ ನಿರ್ಮಾಣ ಮಾಡಲಾಗಿದೆ. ಜೊತೆಗೆ 12 ಮೀಟರ್ ಉದ್ದ ಹಾಗೂ 7 ಮೀಟರ್ ಅಗಲದ ವೇದಿಕೆ ಕೂಡ ಇದೆ. ಒಬ್ಬ ಪ್ರವಾಸಿಗ 15 ನಿಮಿಷಗಳ ಕಾಲ ತೇಲುವ ಸೇತುವೆ ಮೇಲೆ ಎಂಜಾಯ್ ಮಾಡಬಹುದು. ಒಂದು ಬಾರಿಗೆ 100 ಪ್ರವಾಸಿಗರು ತೇಲುವ ಸೇತುವೆಯನ್ನು ಏರಬಹುದಾಗಿತ್ತು.
ಆದರೆ ಗಾಳಿಯ ರಭಸಕ್ಕೆ ಫೋಂಟೊನ್ಸ್ ಬ್ಲಾಕ್ಗಳು ಛಿದ್ರ ಛಿದ್ರವಾಗಿ ತೇಲುತ್ತಿದೆ. ಈ ಸೇತುವೆಯನ್ನು ಸರಿಪಡಿಸಲು ಒಂದು ವಾರಗಳು ಬೇಕಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರವಾಸಿಗರು ಇಲ್ಲದ ವೇಳೆಯಲ್ಲಿ ಫೋಂಟೊನ್ಸ್ ಬ್ಲಾಕ್ಗಳು ಕೊಚ್ಚಿ ಹೋಗಿವೆ.