alex Certify ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಭರ್ಜರಿ ಗುಡ್‌ ನ್ಯೂಸ್:‌ 50 ಸಾವಿರ ಉದ್ಯೋಗಗಳನ್ನು ಸೃಷ್ಟಿಸಲಿದೆ ರಿಲಯನ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಭರ್ಜರಿ ಗುಡ್‌ ನ್ಯೂಸ್:‌ 50 ಸಾವಿರ ಉದ್ಯೋಗಗಳನ್ನು ಸೃಷ್ಟಿಸಲಿದೆ ರಿಲಯನ್ಸ್

ರಿಲಯನ್ಸ್ ಸಂಸ್ಥೆಯಿಂದ ಆಂಧ್ರಪ್ರದೇಶದಲ್ಲಿ 50,000 ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗುವುದು ಮತ್ತು ಆಂಧ್ರದಲ್ಲಿ ತಯಾರಾಗುವ ಉತ್ಪನ್ನಗಳನ್ನು ದೇಶಾದ್ಯಂತ ಕೊಂಡೊಯ್ಯಲು ಹೆಚ್ಚು ಹೆಚ್ಚು ಕೃಷಿ, ಕೃಷಿ ಆಧಾರಿತ ಉತ್ಪನ್ನಗಳು ಮತ್ತು ಇತರ ಉತ್ಪನ್ನಗಳನ್ನು ರಿಲಯನ್ಸ್ ರೀಟೇಲ್ ರಾಜ್ಯದಿಂದ ಪಡೆಯಲಿದೆ. ಇನ್ನು ರಿಲಯನ್ಸ್ 10 ಗಿಗಾ ವಾಟ್ ಸೌರ ವಿದ್ಯುತ್ ಸ್ಥಾವರದಲ್ಲಿ ಹೂಡಿಕೆ ಮಾಡಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರು ‘ಆಂಧ್ರಪ್ರದೇಶ ಜಾಗತಿಕ ಹೂಡಿಕೆದಾರರ ಸಮಾವೇಶ 2023’ ರಲ್ಲಿ ಶುಕ್ರವಾರ ಘೋಷಣೆ ಮಾಡಿದರು.

ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸಮ್ಮುಖದಲ್ಲಿ ರೀಟೇಲ್ ಕ್ಷೇತ್ರದಲ್ಲಿನ ಕ್ರಾಂತಿಯನ್ನು ಉಲ್ಲೇಖಿಸಿದ ಮುಕೇಶ್ ಅಂಬಾನಿ, ರಿಲಯನ್ಸ್ ರೀಟೇಲ್ ಆಂಧ್ರಪ್ರದೇಶದ 6 ಸಾವಿರ ಹಳ್ಳಿಗಳಲ್ಲಿ 1 ಲಕ್ಷದ 20 ಸಾವಿರಕ್ಕೂ ಹೆಚ್ಚು ದಿನಸಿ ವ್ಯಾಪಾರಿಗಳೊಂದಿಗೆ ಪಾಲುದಾರಿಕೆ ಹೊಂದಿದೆ. ಸಣ್ಣ ಉದ್ಯಮಗಳು ಡಿಜಿಟಲ್ ಯುಗದಲ್ಲಿ ಅಭಿವೃದ್ಧಿ ಹೊಂದಲು ಅಗತ್ಯವಿರುವ ಸಾಧನಗಳೊಂದಿಗೆ ಸಜ್ಜುಗೊಂಡಿವೆ. ರಿಲಯನ್ಸ್ ರೀಟೇಲ್ ಆಂಧ್ರಪ್ರದೇಶದಲ್ಲಿ 20,000ಕ್ಕೂ ಹೆಚ್ಚು ನೇರ ಉದ್ಯೋಗಗಳು ಮತ್ತು ಹೆಚ್ಚಿನ ಸಂಖ್ಯೆಯ ಪರೋಕ್ಷ ಉದ್ಯೋಗಗಳನ್ನು ಒದಗಿಸಿದೆ ಎಂದು ಹೇಳಿದರು.

ರಿಲಯನ್ಸ್ ಜಿಯೋ ಕುರಿತು ಮಾತನಾಡಿದ ಮುಕೇಶ್ ಅಂಬಾನಿ, ಆಂಧ್ರಪ್ರದೇಶ ಸೇರಿದಂತೆ ಭಾರತದಾದ್ಯಂತ 2023ರ ಅಂತ್ಯದೊಳಗೆ ಜಿಯೋ ಟ್ರೂ 5ಜಿ ಜಾರಿ‌ ಪೂರ್ಣಗೊಳ್ಳಲಿದೆ ಎಂದು ಹೇಳಿದರು.

40,000 ಕೋಟಿ ರೂಪಾಯಿಗೂ ಹೆಚ್ಚು ಹೂಡಿಕೆಯೊಂದಿಗೆ ಜಿಯೋ ರಾಜ್ಯದಲ್ಲಿ ಅತಿದೊಡ್ಡ ಮತ್ತು ಅತ್ಯುತ್ತಮ ಡಿಜಿಟಲ್ ನೆಟ್‌ವರ್ಕ್ ಹೆಜ್ಜೆಗುರುತನ್ನು ಮೂಡಿಸಿದೆ. ಇದು ರಾಜ್ಯದ ಜನಸಂಖ್ಯೆಯ ಶೇ 98ರಷ್ಟನ್ನು ಒಳಗೊಂಡಿದೆ. ಜಿಯೋ ಟ್ರೂ 5ಜಿ ಆರ್ಥಿಕತೆಗೆ ಹೊಸ ಉತ್ತೇಜನವನ್ನು ನೀಡುತ್ತದೆ ಮತ್ತು ದೊಡ್ಡ ಪ್ರಮಾಣದ ವ್ಯಾಪಾರ ಹಾಗೂ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದರು.

ಆಂಧ್ರಪ್ರದೇಶದ ಬೃಹತ್ ಆರ್ಥಿಕ ಸಾಮರ್ಥ್ಯವನ್ನು ಶ್ಲಾಘಿಸಿದ ಅವರು, ರಾಜ್ಯದ ಆರ್ಥಿಕ ಬಲವನ್ನು ನಂಬಿದ ಮೊದಲ ಕೆಲವು ಭಾರತೀಯ ಕಂಪನಿಗಳಲ್ಲಿ ರಿಲಯನ್ಸ್ ಕೂಡ ಒಂದಾಗಿದೆ ಎಂದು ಹೇಳಿದರು. ರಾಜ್ಯದಲ್ಲಿ ನಮ್ಮ ಕೆಜಿ-ಡಿ 6 ಬೇಸಿನ್ ಮತ್ತು ಅದರ ಪೈಪ್‌ಲೈನ್‌ಗಳಲ್ಲಿ 1,50,000 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಹೂಡಿಕೆ ಮಾಡಿದ್ದೇವೆ. ಶೀಘ್ರದಲ್ಲೇ ಕೆಜಿ-ಡಿ6 ಜಲಾನಯನ ಪ್ರದೇಶವು ಭಾರತದ ಒಟ್ಟು ಅನಿಲ ಉತ್ಪಾದನೆಯಲ್ಲಿ ಶೇ 30ರಷ್ಟು ಕೊಡುಗೆ ನೀಡುತ್ತದೆ ಎಂದು ಅವರು ತಿಳಿಸಿದರು.

ಆಂಧ್ರಪ್ರದೇಶದ ಅನುಕೂಲಗಳ ಬಗ್ಗೆ ಲೆಕ್ಕ ತೆರೆದಿಟ್ಟ ಮುಕೇಶ್ ಅಂಬಾನಿ, ಇದು ಅದ್ಭುತ ಕೈಗಾರಿಕೆಗಳು ಮತ್ತು ಕೈಗಾರಿಕೋದ್ಯಮಿಗಳ ದೀರ್ಘ ಸಾಲನ್ನು ಹೊಂದಿದೆ. ವಿಶೇಷವಾಗಿ ಫಾರ್ಮಾ ಮತ್ತು ಮೂಲಸೌಕರ್ಯಗಳಲ್ಲಿ ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ, ಆಂಧ್ರವು ವಿಶಾಲವಾದ ಸಮುದ್ರ ಗಡಿಯನ್ನು ಹೊಂದಿದ್ದು, ಅದನ್ನು ನೀಲಿ ಆರ್ಥಿಕತೆಯಾಗಿ ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದರು. ನವಭಾರತದ ಬೆಳವಣಿಗೆಯಲ್ಲಿ ಆಂಧ್ರಪ್ರದೇಶವು ಪ್ರಮುಖ ಪಾತ್ರ ವಹಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...