ಬೆಂಗಳೂರು: ರಾಜ್ಯದಲ್ಲಿ ಬೇಸಿಗೆ ಭತ್ತ ಕೊಯ್ಲು ಮುಂದುವರೆದಿದ್ದು ಏಕಾಏಕಿ ಧಾರಣೆ ಕುಸಿದಿರುವುದು ರೈತರಿಗೆ ಆಘಾತ ತಂದಿದೆ.
ಮುಂಗಾರು ಹಂಗಾಮಿನ ಭತ್ತಕ್ಕೆ ಕೇಂದ್ರ ಸರ್ಕಾರ ಘೋಷಿಸಿದ ಬೆಂಬಲ ಬೆಲೆ ಇದೆ ಮೇ 31 ಕ್ಕೆ ಮುಕ್ತಾಯವಾಗುತ್ತದೆ. ಬೇಸಿಗೆ ಹಂಗಾಮಿನ ಭತ್ತಕ್ಕೆ ಬೆಂಬಲ ಬೆಲೆ ಘೋಷಿಸಿ ಖರೀದಿ ಕೇಂದ್ರಗಳ ಮೂಲಕ ಖರೀದಿಸಬೇಕೆಂಬ ಒತ್ತಾಯ ಕೇಳಿಬಂದಿದೆ.
ರಾಜ್ಯದ ಗಂಗಾವತಿ, ಬಳ್ಳಾರಿ, ರಾಯಚೂರು, ಶಿವಮೊಗ್ಗ, ದಾವಣಗೆರೆ ಮೊದಲಾದ ಕಡೆಗಳಲ್ಲಿ ಬೇಸಿಗೆ ಹಂಗಾಮಿನಲ್ಲಿ ಭಾರೀ ಪ್ರಮಾಣದಲ್ಲಿ ಭತ್ತ ಬೆಳೆಯಲಾಗಿದ್ದು, ಕೊಯ್ಲು ಆರಂಭವಾಗಿದೆ. ಉತ್ತಮ ಫಸಲು ಬಂದಿರುವುದರಿಂದ ಮಾರುಕಟ್ಟೆಗೆ ಭತ್ತ ವ್ಯಾಪಾರಕ್ಕೆ ಬರುತ್ತಿದೆ. ಅನೇಕ ಕಡೆ ವರ್ತಕರು ಗದ್ದೆಯಲ್ಲೇ ಖರೀದಿ ಮಾಡುತ್ತಿದ್ದಾರೆ.
ಕೊರೋನಾ ಕಾರಣದಿಂದ ಭತ್ತದ ವ್ಯಾಪಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಪಾರಕ್ಕೆ ಬರುತ್ತಿಲ್ಲ. ಲಾಕ್ಡೌನ್ ಜಾರಿಯಾಗುವ ಮೊದಲು ಕ್ವಿಂಟಾಲ್ ಗೆ 2,200 ರೂಪಾಯಿವರೆಗೂ ಇದ್ದ ಜ್ಯೋತಿ ಭತ್ತ ಈಗ 1400 ರಿಂದ 1500 ರೂ.ವರೆಗೆ ಇಳಿಕೆಯಾಗಿದೆ. ಅದೇ ರೀತಿ ವಿವಿಧ ಭತ್ತದ ಧಾರಣೆ ದಿಢೀರ್ ಕುಸಿತ ಕಂಡಿದ್ದು, ಬೆಂಬಲ ಬೆಲೆ ಅವಧಿ ವಿಸ್ತರಿಸಬೇಕು. ಹೊಸ ಬೆಲೆ ಘೋಷಿಸಿ ಖರೀದಿ ಕೇಂದ್ರ ತೆರೆಯಬೇಕೆಂದು ರೈತರು ಒತ್ತಾಯಿಸಿದ್ದಾರೆ.