alex Certify ಕಮಲ್ ಮಾತ್ರವಲ್ಲ ಈ ತಾರೆಯರೂ ಚುನಾವಣೆಯಲ್ಲಿ ಸೋಲುಂಡವರೇ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಮಲ್ ಮಾತ್ರವಲ್ಲ ಈ ತಾರೆಯರೂ ಚುನಾವಣೆಯಲ್ಲಿ ಸೋಲುಂಡವರೇ…!

ಪಂಚರಾಜ್ಯ ಚುನಾವಣೆಯಲ್ಲಿ ಘಟಾನುಘಟಿಗಳೇ ಸೋಲಿನ ಕಹಿ ಕಂಡಿದ್ದಾರೆ. ಇದೇ ಸಾಲಿಗೆ ಮಕ್ಕಳ್​ ನಿಧಿ ಮೈಯಂ ಪಕ್ಷದಿಂದ ಸ್ಪರ್ಧಿಸಿದ್ದ ನಟ ಕಮಲ್​ ಹಾಸನ್​ ಕೂಡ ಸೇರಿದ್ದಾರೆ. ಕೊಯಮತ್ತೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವನಥಿ ಶ್ರೀನಿವಾಸನ್​​ ವಿರುದ್ಧ ಕಮಲ್​ ಹಾಸನ್​ ಪರಾಭವಗೊಂಡಿದ್ದಾರೆ.

ಕಮಲ್​ಹಾಸನ್​ ಇದೇ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದು ಮೊದಲ ಪ್ರಯತ್ನದಲ್ಲೇ ಸೋಲಿನ ಕಹಿ ಉಂಡಿದ್ದಾರೆ. 22 ಸುತ್ತುಗಳ ಎಣಿಕಾ ಕಾರ್ಯದವರೆಗೂ ಕಮಲ್​ಹಾಸನ್​ ಮುನ್ನಡೆಯನ್ನ ಕಾಯ್ದುಕೊಂಡಿದ್ದರು. ಇದಾದ ಬಳಿಕ ಫಲಿತಾಂಶ ವನಥಿ ಪರವಾಗಿದೆ. ವನಥಿ, ಕಮಲ್​ ಹಾಸನ್​ ವಿರುದ್ಧ ಒಟ್ಟು 1728 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.

ಕಮಲ್​ ಹಾಸನ್​ ನೇತೃತ್ವದ ಮಕ್ಕಳ್​ ನಿಧಿ ಮೈಯಂ ಪಕ್ಷ ತಮಿಳುನಾಡಿನಲ್ಲಿ ಒಂದೇ ಒಂದೂ ಸೀಟನ್ನ ಗೆಲ್ಲುವಲ್ಲಿ ವಿಫಲವಾಗಿದೆ. ಅಂದಹಾಗೆ ಮೊದಲ ಪ್ರಯತ್ನದಲ್ಲೇ ಸೋಲಿನ ಕಹಿಕಂಡ ಮೊದಲ ಸೆಲೆಬ್ರಿಟಿ ಕಮಲ್​ಹಾಸನ್​ ಅಲ್ಲ. ಈಗಾಗಲೇ ಸಿನಿ ಲೋಕದ ಮೂಲಕ ಜನರ ಮನದಲ್ಲಿ ಸ್ಥಾನ ಗೆದ್ದ ಅನೇಕರು ಚುನಾವಣಾ ಅದೃಷ್ಟ ಪರೀಕ್ಷೆಯಲ್ಲಿ ಮಣ್ಣು ಮುಕ್ಕಿದ ಇತಿಹಾಸವಿದೆ.

2014ರಲ್ಲಿ ಚಂಡೀಗಢದಲ್ಲಿ ಆಮ್​​​ ಆದ್ಮಿ ಪಕ್ಷದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಗುಲ್ ಪನಾಗ್​, ಬಿಜೆಪಿಯ ಕಿರಣ್​ ಖೇರ್​ ವಿರುದ್ಧ ಸೋಲನ್ನ ಕಂಡಿದ್ದರು.

ಇದೇ ವರ್ಷದ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ್ಯ ಅಭ್ಯರ್ಥಿಯಾಗಿ ಮುಂಬೈ ವಾಯುವ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಾಲಿವುಡ್​ ನಟಿ ರಾಖಿ ಸಾವಂತ್ ಪರಾಭವಗೊಂಡಿದ್ದರು.

ಮಹಾರಾಷ್ಟ್ರ ನವನಿರ್ಮಾಣ ಸೇನಾದ ಅಭ್ಯರ್ಥಿಯಾಗಿದ್ದ ಮಹೇಶ್​ 2014ರ ಲೋಕಸಭಾ ಚುನಾವಣೆಯಲ್ಲಿ ಮುಂಬೈ ವಾಯುವ್ಯ ಕ್ಷೇತ್ರದಿಂದ ಸ್ಪರ್ಧಿಸಿ ಶಿವಸೇನಾದ ಗಜಾನನ್​​ ಕೃತಿಕರ್​ ವಿರುದ್ಧ ಸೋಲನ್ನ ಕಂಡಿದ್ದರು.

ನಟಿ ಕಂಗನಾ ರಣಾವತ್​​ ಟ್ವಿಟರ್​ ಖಾತೆ ಬ್ಯಾನ್…!

ಕಾಂಗ್ರೆಸ್​​ಗೆ ಸೇರ್ಪಡೆಗೊಂಡಿದ್ದ ರವಿಶಂಕರ್​​ 2014ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶ ಜೌನ್​ಪುರ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಈ ಚುನಾವಣೆಯಲ್ಲಿ ಸೋತ ಬಳಿಕ 2019ರಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದರು. ಇದಾದ ಬಳಿಕ ಉತ್ತರ ಪ್ರದೇಶದ ಗೋರಖ್​ಪುರದ ಕ್ಷೇತ್ರದಲ್ಲಿ ಗೆಲುವನ್ನ ಸಾಧಿಸಿದ್ದರು.

2003ರಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದ ಸ್ಮೃತಿ ಇರಾನಿ ಮಹಾರಾಷ್ಟ್ರ ಯುಥ್​ ವಿಂಗ್​​ನ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದರು. 2004ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಚಾಂದನಿ ಚೌಕ್​ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಸ್ಮೃತಿ‌, ಕಪಿಲ್​ ಸಿಬಲ್​​ ಎದುರು ಸೋತಿದ್ದರು. ಆದರೆ ಈಗ ಸ್ಮೃತಿ ಇರಾನಿ ಕೇಂದ್ರ ಸಚಿವೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸಮಾಜವಾದಿ ಪಕ್ಷದಿಂದ 2009ರಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮನೋಜ್​ ತಿವಾರಿ, ಯೋಗಿ ಆದಿತ್ಯನಾಥ್​ ವಿರುದ್ಧ ಸೋತಿದ್ದರು.

ಪ್ರಕಾಶ್​ ಝಾ ಮೂರು ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದು ಪ್ರತಿ ಬಾರಿಯೂ ಸೋಲನ್ನ ಕಂಡಿದ್ದಾರೆ. 2004ರಲ್ಲಿ ತವರೂರು ಚಂಪರನ್​​ನಲ್ಲಿ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದರು. 2009ರಲ್ಲೂ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಸೋಲನ್ನ ಕಂಡರು. ಇದಾದ ಬಳಿಕ 2014ರಲ್ಲಿ ಮತ್ತೊಮ್ಮೆ ಚುನಾವಣಾ ಕಣಕ್ಕೆ ಇಳಿದಿದ್ದ ಪ್ರಕಾಶ್​ ಅಲ್ಲಿಯೂ ಮುಖಭಂಗ ಅನುಭವಿಸಿದರು.

2014ರಲ್ಲಿ ಜನಸೇನಾ ಪಕ್ಷವನ್ನ ಕಟ್ಟಿದ್ದ ಪವನ್​ ಕಲ್ಯಾಣ್​ 2019ರಲ್ಲಿ 2 ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ ಎರಡೂ ಕ್ಷೇತ್ರಗಳಲ್ಲೂ ಪವನ್​ ಕಲ್ಯಾಣ್​ ಸೋತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...