ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ತಾವು ಮಾಡಿದ ಸಾಧನೆಯಿಂದಲೇ ‘ಕ್ರಿಕೆಟ್ ದೇವರು’ ಎಂದು ಕರೆಸಿಕೊಳ್ಳುತ್ತಾರೆ. ಸಚಿನ್ ಈಗ ಶ್ರೀಮಂತರಾಗಿರಬಹುದು. ಆದರೆ, ಹಿಂದೆ ಅವರು ಕ್ಯಾಬ್ ಗೆ ಕೊಡಲು ಕಾಸಿಲ್ಲದೇ, ನಡೆದುಕೊಂಡೇ ಮನೆ ಸೇರಿದ್ದರು.
ಸಚಿನ್ ಗೆ 12 ವರ್ಷ ವಯಸ್ಸಾಗಿದ್ದ ಸಂದರ್ಭದಲ್ಲಿ, ಮುಂಬೈನ ಅಂಡರ್ 15 ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದರು. ತಂಡದೊಂದಿಗೆ ಸಚಿನ್, ಪುಣೆಯಲ್ಲಿ ನಡೆದ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. ಆ ಪಂದ್ಯದಲ್ಲಿ ಸಚಿನ್ ಕೇವಲ 4 ರನ್ ಗಳಿಸಿ ಔಟಾಗಿ ಅಳುತ್ತಾ ಕುಳಿತಿದ್ದರಂತೆ. ಇನ್ನೊಮ್ಮೆ ಬ್ಯಾಟಿಂಗ್ ಮಾಡಲು ಅವರಿಗೆ ಅವಕಾಶವೇ ಸಿಗಲಿಲ್ಲ.
ಮಳೆಯಿಂದಾಗಿ ಪಂದ್ಯಾವಳಿ ರದ್ದಾಗಿತ್ತು. ಗೆಳೆಯರೊಂದಿಗೆ ಸಿನಿಮಾ ನೋಡಿದ ಸಚಿನ್, ಮುಂಬೈಗೆ ವಾಪಸ್ ಆಗಿ ದಾದಾರ್ ರೈಲ್ವೇ ಸ್ಟೇಷನ್ ನಲ್ಲಿ ಇಳಿದಿದ್ದು, ಅವರ ಬಳಿ ಎರಡು ದೊಡ್ಡ ಬ್ಯಾಗ್ ಕೂಡ ಇದ್ದವು. ಜೇಬಿನಲ್ಲಿ ನಯಾ ಪೈಸೆಯೂ ಇಲ್ಲದ ಅವರು ದೊಡ್ಡ ಬ್ಯಾಗ್ ಹೊತ್ತುಕೊಂಡೇ ಶಿವಾಜಿ ಪಾರ್ಕ್ ನಲ್ಲಿರುವ ತಮ್ಮ ಮನೆಗೆ ನಡೆದುಕೊಂಡೇ ಹೋಗಿದ್ದರು. ಇದನ್ನೆಲ್ಲಾ ಸಚಿನ್ ಅವರೇ ಹೇಳಿಕೊಂಡಿದ್ದಾರೆ. ಈಗಿನಂತೆ ಮೊಬೈಲ್ ಇದ್ದಿದ್ದರೆ, ತಕ್ಷಣವೇ ನನ್ನ ಖಾತೆಗೆ ಹಣ ಹಾಕಿಸಿಕೊಂಡು, ಕ್ಯಾಬ್ ನಲ್ಲಿ ಮನೆ ತಲುಪಿರುತ್ತಿದ್ದೆ ಎಂದು ತಿಳಿಸಿದ್ದಾರೆ.