alex Certify ʼವರಮಹಾಲಕ್ಷ್ಮಿʼ ಹಬ್ಬಕ್ಕೆ ತಪ್ಪದೆ ಮಾಡಿ ಈ ಸಿದ್ಧತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼವರಮಹಾಲಕ್ಷ್ಮಿʼ ಹಬ್ಬಕ್ಕೆ ತಪ್ಪದೆ ಮಾಡಿ ಈ ಸಿದ್ಧತೆ

ಶ್ರಾವಣ ಮಾಸದ ಶುಕ್ರವಾರ. ವರವನ್ನು ಕೊಡುವ ಲಕ್ಷ್ಮಿ ದೇವಿಯ ಆರಾಧನೆ ಮಾಡುವ ದಿನ. ಅನೇಕ ಮುತ್ತೈದೆಯರು ವರಮಹಾಲಕ್ಷ್ಮಿ ವ್ರತವನ್ನು ಶ್ರದ್ಧಾ ಭಕ್ತಿಯಿಂದ ನೆರೆವೇರಿಸ್ತಾರೆ.

ಕುಟುಂಬಕ್ಕೆ, ಮುಖ್ಯವಾಗಿ ಪತಿಯ ಆರೋಗ್ಯಾಭಿವೃದ್ಧಿ ನೀಡುವಂತೆ ಬೇಡಿ ಈ ಪೂಜೆ ಸಲ್ಲಿಸಲಾಗುತ್ತದೆ. ವರಮಹಾಲಕ್ಷ್ಮಿ ಪೂಜೆ ಮುಗಿಯುವವರೆಗೂ ವ್ರತ ನಿರತ ಮಹಿಳೆಯರು ಆಹಾರ ಸೇವನೆ ಮಾಡುವುದಿಲ್ಲ.

ವರಮಹಾಲಕ್ಷ್ಮಿ ವ್ರತಕ್ಕೆ ಈಗಾಗಲೇ ಸಿದ್ದತೆಗಳೂ ಜೋರಾಗಿ ನಡೆದಿವೆ. ಮಾರುಕಟ್ಟೆಗಳು ಹಣ್ಣು, ಹೂಗಳಿಂದ ಕಂಗೊಳಿಸ್ತಿವೆ. ಲಕ್ಷ್ಮಿ ದೇವಿಯ ಆಭರಣಗಳು, ಹಣ್ಣು, ಸಿಹಿ ತಿಂಡಿಗಳ ಖರೀದಿಯಲ್ಲಿ ಭಕ್ತರು ನಿರತರಾಗಿದ್ದಾರೆ. ಮೊದಲ ಬಾರಿ ವರಮಹಾಲಕ್ಷ್ಮಿ ವ್ರತ ಮಾಡುವ ಮಹಿಳೆಯರು ಕೆಲವೊಂದು ವಿಚಾರಗಳ ಬಗ್ಗೆ ತಿಳಿದುಕೊಳ್ಳಬೇಕಾಗುತ್ತದೆ.

ಹಿರಿಯರ ಜೊತೆ ಇದ್ದರೆ ಸಮಸ್ಯೆ ಇರುವುದಿಲ್ಲ. ಕುಟುಂಬಸ್ಥರಿಂದ ದೂರ ಇರುವ ಮಹಿಳೆಯರು ಪೂಜೆಗಾಗಿ ಕೆಲವೊಂದು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ.

ವ್ರತದ ಮೊದಲ ಭಾಗ ಸ್ವಚ್ಛತೆ. ಮನೆಯನ್ನು ಸ್ವಚ್ಛವಾಗಿಡುವುದು ಬಹು ಮುಖ್ಯ. ಲಕ್ಷ್ಮಿ ದೇವಿ, ಶುದ್ಧವಿರುವ ಮನೆ ಪ್ರವೇಶಿಸುತ್ತಾಳೆಂಬ ನಂಬಿಕೆ ಇದೆ. ಹಾಗಾಗಿ ಮೊದಲು ಮಹಿಳೆಯಾದವಳು ಮನೆಯನ್ನು ಸ್ವಚ್ಛಗೊಳಿಸಬೇಕು.

ಕೊನೆಯ ಕ್ಷಣದಲ್ಲಿ ಮಾರುಕಟ್ಟೆಗೆ ಓಡುವುದು ಒಳ್ಳೆಯದಲ್ಲ. ಮೊದಲೇ ಪೂಜೆಗೆ ಬೇಕಾಗುವ ಪದಾರ್ಥಗಳ ಪಟ್ಟಿಯನ್ನು ಮಾಡಿಕೊಳ್ಳಿ. ಕಳಶವಿಲ್ಲದಿದ್ದರೆ ಅದನ್ನು ಪಟ್ಟಿಯಲ್ಲಿ ಸೇರಿಸಿಕೊಳ್ಳಿ. ನಂತ್ರ ಹೂ, ಹಣ್ಣು, ಡ್ರೈ ಫ್ರುಟ್ಸ್, ತೆಂಗಿನ ಕಾಯಿ, ಅರಿಶಿನ, ಕುಂಕುಮ, ಕರ್ಪೂರ, ಬಾಳೆಗಿಡ, ಮಾವಿನ ಎಲೆಗಳು, ವೀಳ್ಯದೆಲೆ ಹೀಗೆ ಪೂಜೆಗೆ ಬೇಕಾಗುವ ಎಲ್ಲ ಸಾಮಗ್ರಿಗಳನ್ನು ಪಟ್ಟಿ ಮಾಡಿ ಮಾರುಕಟ್ಟೆಗೆ ಹೋಗಿ ತೆಗೆದುಕೊಂಡು ಬನ್ನಿ.

ದೇವಿ ಪೂಜೆಗೆ ಬೇಕಾಗುವ ಸಿಹಿಯನ್ನು ತಯಾರಿಸಿಕೊಳ್ಳಲು ಸಿದ್ಧತೆಗಳನ್ನು ಮಾಡಿಕೊಳ್ಳಿ. ಸಾಮಾನ್ಯವಾಗಿ ವರಮಹಾಲಕ್ಷ್ಮಿಗೆ ಪುಳಿಯೊಗರೆ, ಹೋಳಿಗೆ, ಸಜ್ಜಿಗೆ, ರವೆಯುಂಡೆ, ಶಾವಿಗೆ ಪಾಯಸ, ಕರ್ಜಿಕಾಯಿ ಶ್ರೇಷ್ಠವಾದದ್ದು. ಕೋಡುಬಳೆ, ಚಕ್ಕುಲಿಯನ್ನು ಕೂಡ ದೇವಿಗೆ ನೈವೇದ್ಯ ಮಾಡುತ್ತಾರೆ. ಹಾಗಾಗಿ ಇವುಗಳಲ್ಲಿ ಯಾವುದನ್ನು ಮಾಡಬೇಕು ಎಂಬುದನ್ನು ನಿರ್ಧರಿಸಿ ತಯಾರಿ ಮಾಡಿಕೊಳ್ಳಿ.

ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ, ಮಡಿಯುಟ್ಟು ದೇವರ ಮನೆಯನ್ನು ಸ್ವಚ್ಛಗೊಳಿಸಿ, ದೇವರ ಮನೆಯಲ್ಲಿ ಚೆಂದದ ರಂಗೋಲಿ ಹಾಕಿ. ಎಂಟು ದಳಗಳ ಕಮಲದ ಹೂವಿನ ರಂಗೋಲಿ ಬಹಳ ಶ್ರೇಷ್ಠ. ಈ ರಂಗೋಲಿ ಮೇಲೆ ಅಕ್ಕಿ ಹರಡಿದ ಬಟ್ಟಲನ್ನು ಇಡಿ. ಅದರ ಮೇಲೆ ಕಳಶವನ್ನಿಡಬೇಕು. ಒಂದು ಚೊಂಬಿಗೆ ನೀರು, ಅಕ್ಕಿ, ಅಡಿಕೆ, ನಾಣ್ಯ, ಹಾಕಬೇಕು. ನಂತ್ರ ಕಳಶಕ್ಕೆ ಅರಿಶಿನ ಕುಂಕುಮ ಸವರಬೇಕು, ಅದರ ಮೇಲೆ ತೆಂಗಿನ ಕಾಯಿ ಇಡಬೇಕು. ಅದಕ್ಕೆ ದೇವಿಯ ಬೆಳ್ಳಿ ಮುಖವಾಡವನ್ನು ಇಡಬೇಕು. ನಂತ್ರ ಕಳಶದ ಬಾಯಿಗೆ ಮಾವಿನ ಎಲೆ ಹಾಗೂ ವೀಳ್ಯದೆಲೆಯನ್ನಿಡಬೇಕು. ಕಳಶಕ್ಕೆ ಹೊಸ ಬಟ್ಟೆ ಉಡಿಸಿ, ಸಿಂಗಾರ ಮಾಡಬೇಕು. ನಂತ್ರ ಲಕ್ಷ್ಮಿ ಆವಾಹನೆ ಮಾಡಿ ಪೂಜೆ ಮಾಡಬೇಕು.

ವಿಧಿ ವಿಧಾನದಂತೆ ದೇವಿಯ ಪೂಜೆ ಮಾಡಿದ ನಂತರ ಕುಟುಂಬಸ್ಥರೆಲ್ಲ ಪ್ರಸಾದ ಸ್ವೀಕರಿಸಿದ ನಂತ್ರ ಆಹಾರ ಸೇವನೆ ಮಾಡಬೇಕು. ಹೀಗೆ ಮಾಡುವುದರಿಂದ ಲಕ್ಷ್ಮಿ ಪ್ರಸನ್ನಳಾಗಿ ಬೇಡಿದ ವರ ನೀಡ್ತಾಳೆಂಬ ನಂಬಿಕೆ ಹಿಂದುಗಳದ್ದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...