ಬೆಂಗಳೂರು: ಲಾಕ್ಡೌನ್ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಆಟೋ, ಟ್ಯಾಕ್ಸಿ ಚಾಲಕರಿಗೆ ಘೋಷಣೆ ಮಾಡಿರುವ 5000 ರೂ. ಪರಿಹಾರ ಧನವನ್ನು ಎರಡು ದಿನದಲ್ಲಿ ಖಾತೆಗೆ ಜಮಾ ಮಾಡಲಾಗುವುದು.
ಸಾರಿಗೆ ಇಲಾಖೆ ಈ ನಿಟ್ಟಿನಲ್ಲಿ ಸಿದ್ಧತೆ ನಡೆಸಿದ್ದು ಮೊದಲ ಹಂತದ ಪರಿಹಾರವನ್ನು ಎರಡು ದಿನದಲ್ಲಿ ಪಾವತಿ ಮಾಡಲಾಗುವುದು. 1.77 ಲಕ್ಷ ಆಟೋ ಮತ್ತು ಟ್ಯಾಕ್ಸಿ ಚಾಲಕರು ಅರ್ಜಿ ಸಲ್ಲಿಸಿದ್ದು, ಮೊದಲ ಹಂತದಲ್ಲಿ 40,000 ಚಾಲಕರಿಗೆ ಸಹಾಯ ಧನ ಜಮಾ ಮಾಡಲಾಗುವುದು.
ಸರ್ಕಾರದಿಂದ 20 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು, ತಲಾ 5 ಸಾವಿರ ರೂಪಾಯಿಯಂತೆ 40,000 ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಮೊದಲ ಹಂತದಲ್ಲಿ ಪರಿಹಾರ ನೀಡಲಾಗುವುದು. ಆಟೋ ಮತ್ತು ಟ್ಯಾಕ್ಸಿ ಚಾಲಕರು ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು. ಆಧಾರ್ ಆಧಾರಿತ ಡಿಬಿಟಿ ಮೂಲಕ ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ ಪರಿಹಾರ ಧನ ಜಮಾ ಮಾಡಲಾಗುವುದು.
ಆಟೋ ಚಾಲಕರು ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಿಸಿಕೊಳ್ಳಬೇಕು. ಅರ್ಜಿ ಸಲ್ಲಿಕೆ ವೇಳೆ ಮೊಬೈಲ್ ಸಂಖ್ಯೆ ನಮೂದಿಸಿದರೆ ಓಟಿಪಿ ಮೂಲಕ ಅರ್ಜಿ ಸ್ಥಿತಿಗತಿ ತಿಳಿದುಕೊಳ್ಳಬಹುದಾಗಿದೆ. ಉಳಿದ ಆಟೋ ಚಾಲಕರಿಗೆ ಎರಡನೇ ಹಂತದಲ್ಲಿ ಪರಿಹಾರ ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗಿದೆ.