ನವದೆಹಲಿ: ಕೇಂದ್ರ ಸರ್ಕಾರ 3 ಕೋಟಿ ಪಡಿತರ ಚೀಟಿಗಳನ್ನು ರದ್ದು ಮಾಡಿದೆ ಎಂದು ಕೇಂದ್ರ ಆಹಾರ ಖಾತೆ ಸಚಿವ ರಾಮ್ ವಿಲಾಸ್ ಪಾಸ್ವಾನ್ ಮಾಹಿತಿ ನೀಡಿದ್ದಾರೆ.
ಲಾಕ್ ಡೌನ್ ಅವಧಿಯಲ್ಲಿ ಬಡವರಿಗೆ ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ ಜೂನ್ ವರೆಗೆ ಮೂರು ತಿಂಗಳ ಕಾಲ ಉಚಿತವಾಗಿ ಪಡಿತರ ವಿತರಣೆ ಮಾಡುವ ಘೋಷಣೆಯನ್ನು ಸರ್ಕಾರ ಈಗಾಗಲೇ ಮಾಡಿದೆ.
ಸರ್ಕಾರ ಹೊರಡಿಸಿದ ಹೇಳಿಕೆಯ ಪ್ರಕಾರ, ಆಧಾರ್ ಮತ್ತು ಪಡಿತರ ಚೀಟಿ ಜೋಡಣೆ ಮಾಡುವುದು ಅಗತ್ಯವಾಗಿದೆ. ಆಧಾರ್ ಲಿಂಕ್ ಆಗದ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ. ಇದಲ್ಲದೆ ನಕಲಿ ಪಡಿತರ ಚೀಟಿಗಳನ್ನು ತಯಾರಿಸುವ ಮೂಲಕ, ಆಹಾರ ಮತ್ತು ಇತರ ವಸ್ತುಗಳನ್ನು ಉಚಿತವಾಗಿ ತೆಗೆದುಕೊಳ್ಳುತ್ತಿರುವುದು ಪತ್ತೆಯಾಗಿದೆ. ಅಂತಹ ನಕಲಿ ಪಡಿತರ ಚೀಟಿಯನ್ನು ರದ್ದು ಮಾಡಲಾಗಿದೆ.
ದೇಶದಲ್ಲಿ ಒಟ್ಟು 80 ಕೋಟಿ ಜನರು ಪಡಿತರ ಚೀಟಿ ಹೊಂದಿದ್ದಾರೆ. ನಿಮ್ಮ ಪಡಿತರ ಚೀಟಿ ರದ್ದಾಗಿದ್ದರೆ ಆಹಾರ ಸರಬರಾಜು ಇಲಾಖೆಗೆ ಹೋಗಬೇಕಾಗುತ್ತದೆ. ಅಲ್ಲಿ ಆಧಾರ್ ಹಾಗೂ ಪಡಿತರ ಚೀಟಿ ತೋರಿಸಿ ಆಧಾರ್ ಜೋಡಣೆ ಮಾಡಿಸಿದಲ್ಲಿ ನಿಮಗೆ ಪಡಿತರ ಸಿಗಲಿದೆ.