alex Certify ಮನ ಕಲಕುತ್ತೆ ಸುಂದರ ನಟಿಯೊಬ್ಬಳ ನೋವಿನ ಕಥೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನ ಕಲಕುತ್ತೆ ಸುಂದರ ನಟಿಯೊಬ್ಬಳ ನೋವಿನ ಕಥೆ…!

ಪರ್ವಿನ್ ಬಾಬ್ಬಿ ಒಂದು ಕಾಲದಲ್ಲಿ ಅಕ್ಷರಶಃ ಬಾಲಿವುಡ್ ಮಹಾರಾಣಿಯಂತೆ ಮೆರೆದಿದ್ದರು. ಆಕೆಯ ಕೃಪಾಕಟಾಕ್ಷಕ್ಕೆ ಒಳಗಾಗಲು ಬಾಲಿವುಡ್ ದಿಗ್ಗಜ ನಟರೇ ಹಾತೊರೆಯುತ್ತಿದ್ದರು. ಇಂತಹ ಪರ್ವಿನ್ ಬಾಬ್ಬಿ ತೀವ್ರವಾದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಳೆಂಬ ಸತ್ಯವನ್ನು ನೀವು ನಂಬಲೇಬೇಕು.

ಪರ್ವಿನ್ ಬಾಬ್ಬಿಯನ್ನು ಹುಚ್ಚರಂತೆ ಆರಾಧಿಸುತ್ತಿದ್ದ ಬಾಲಿವುಡ್ ನಿರ್ದೇಶಕ ಮಹೇಶ್ ಭಟ್, ಮದುವೆಯಾಗಿದ್ದರೂ ಸಂಸಾರವನ್ನು ತೊರೆದು ಪರ್ವಿನ್ ಜೊತೆಯಲ್ಲೇ ಕಾಲ ಕಳೆಯುತ್ತಿದ್ದರು. ಒಂದು ದಿನ ಆಕೆಯ ಮನೆಯಲ್ಲಿ ಮಹೇಶ್ ಭಟ್ ಕುಳಿತಿದ್ದ ವೇಳೆ ಕೈಯಲ್ಲಿ ಚಾಕು ಹಿಡಿದು ಅಡುಗೆ ಮನೆಯಿಂದ ಬಂದ ಪರ್ವಿನ್ ಬಾಬ್ಬಿ, ಅವರು ನನ್ನನ್ನು ಕೊಲ್ಲಲು ಬರುತ್ತಿದ್ದಾರೆ ನನ್ನನ್ನು ಅವರಿಂದ ರಕ್ಷಿಸು ಎಂದು ಬಡಬಡಿಸಿದಾಗ ಮೊದಲ ಬಾರಿಗೆ ಆಕೆಯ ಮಾನಸಿಕ ಕಾಯಿಲೆ ಬಗ್ಗೆ ಮಹೇಶ್ ಭಟ್ ಅರಿವಿಗೆ ಬರುತ್ತದೆ.

ಇದಕ್ಕೂ ಮುನ್ನ ಆಕೆಯೊಂದಿಗೆ ಸಂಬಂಧ ಹೊಂದಿದ್ದ ಬಾಲಿವುಡ್ ನಟರಾದ ಕಬೀರ್ ಬೇಡಿ ಹಾಗೂ ಡ್ಯಾನಿ ಕುರಿತು ಮಹೇಶ್ ಭಟ್ ರಿಗೆ ತಿಳಿ ಹೇಳುತ್ತಾರೆ. ಆಕೆಯನ್ನು ಮಹೇಶ್ ಭಟ್ ಮದುವೆಯಾಗಲು ನಿರ್ಧರಿಸಿರುವ ಬಗ್ಗೆ ಅರಿತು ಅಮೆರಿಕದ ತಮಗೆ ಗೊತ್ತಿರುವ ಖ್ಯಾತ ವೈದ್ಯರ ಹೆಸರನ್ನು ಹೇಳಿ ಅಲ್ಲಿ ಚಿಕಿತ್ಸೆ ಕೊಡಿಸಿದರೆ ಗುಣವಾಗಬಹುದೆಂದು ಸೂಚಿಸುತ್ತಾರೆ.

ಅದರಂತೆ ಮಹೇಶ್ ಭಟ್ ಆಕೆಯನ್ನು ವೈದ್ಯರ ಬಳಿ ಕರೆದೊಯ್ದರೂ ಆಕೆ ವೈದ್ಯರೊಂದಿಗೆ ಸಹಕರಿಸುವುದಿಲ್ಲ. ಅಲ್ಲದೇ ಅವರು ನೀಡಿದ ಔಷಧಿ, ಮಾತ್ರೆಗಳನ್ನು ಸೇವಿಸದೆ ನಿರ್ಲಕ್ಷ್ಯ ಮಾಡತೊಡಗುತ್ತಾಳೆ. ಆದರೂ ಪಟ್ಟು ಬಿಡದ ಮಹೇಶ್ ಭಟ್ ಬಲವಂತವಾಗಿ ಮಾತ್ರೆ ಕೊಡಲು ಹೋದರೆ ನೀನು ನನ್ನನ್ನು ಕೊಲ್ಲಲು ನೋಡುತ್ತಿದ್ದಿಯಾ. ಮೊದಲು ನೀನು ನುಂಗು ಎಂದು ಪರೀಕ್ಷೆಗಿಳಿಯುತ್ತಾಳೆ.

ಇಷ್ಟಾದರೂ ತಾಳ್ಮೆ ಕಳೆದುಕೊಳ್ಳದ ಮಹೇಶ್ ಭಟ್, ಆಕೆ ಹಿಂದಿ ಚಿತ್ರರಂಗದಲ್ಲಿ ಉತ್ತುಂಗದಲ್ಲಿದ್ದರೂ ಸ್ಥಳ ಬದಲಾದರೆ ಸರಿ ಹೋಗಬಹುದೆಂದು ಭಾವಿಸಿ ಆಕೆಯನ್ನು ಬೆಂಗಳೂರಿಗೆ ಕರೆದುಕೊಂಡು ಬರುತ್ತಾರೆ. ಇಲ್ಲಿ ಬಂದ ನಂತರ ಆಕೆಯ ಮಾನಸಿಕ ಸ್ಥಿಮಿತತೆ ಮತ್ತಷ್ಟು ಹದಗೆಡತೊಡಗುತ್ತದೆ. ಅಲ್ಲದೇ ನಟ ಅಮಿತಾಭ್ ಬಚ್ಚನ್ ನನ್ನನ್ನು ಕೊಲ್ಲಲು ಹೊಂಚು ಹಾಕುತ್ತಿರುವುದಾಗಿ ಬಡಬಡಿಸತೊಡಗುತ್ತಾಳೆ.

ಕೊನೆಗೆ ರೋಸಿ ಹೋದ ಮಹೇಶ್ ಭಟ್ ಇನ್ನೆಂದೂ ನಿನ್ನ ಬಳಿ ಬರುವುದಿಲ್ಲವೆಂದು ಹೊರಟು ನಿಂತಾಗ ರಣಚಂಡಿಯಂತಾದ ಪರ್ವಿನ್ ಬಾಬ್ಬಿ ಬೆತ್ತಲೆಯಾಗಿದ್ದರೂ ಸ್ಥಳದ ಪರಿವೇ ಇಲ್ಲದೇ ಅವರನ್ನು ಹೊಡೆಯಲು ಓಡಿಸಿಕೊಂಡು ಹೋಗುತ್ತಾಳೆ. ಕಡೆಗೆ ಸಾಕು ಸಾಕಾದ ಮಹೇಶ್ ಭಟ್ ಅಂತಿಮವಾಗಿ ಪರ್ವಿನ್ ಬಾಬ್ಬಿ ಸಖ್ಯ ತೊರೆದು ತಮ್ಮ ಮೊದಲ ಪತ್ನಿಯ ಬಳಿ ಮರಳಿ ಹೋಗುತ್ತಾರೆ. ಇಂತಹ ನಟಿ 2005 ಜನವರಿ 20 ರಂದು ತೀರಿಕೊಂಡಾಗ ಇದೇ ಮಹೇಶ್ ಭಟ್ ತಾವೇ ಮುಂದೆ ನಿಂತು ಅಂತಿಮ ವಿಧಿ ವಿಧಾನಗಳನ್ನು ನಡೆಸುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...